ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಿ: ಬಿಳಿಮಲೆ
ಕರ್ನಾಟಕ ರಾಜ್ಯ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಕರಡು ನಿಯಮಗಳಲ್ಲಿ ಕನ್ನಡ ಭಾಷೆಗೆ ಹಾಗೂ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಸಲ್ಲಬೇಕಾದ ಆದ್ಯತೆ ನೀಡದೆ ಅನ್ಯಾಯ ಮಾಡಲಾಗಿದೆ. ಕೂಡಲೇ ಈ ಕನ್ನಡ ವಿರೋಧಿ ಧೋರಣೆಯನ್ನು ಕೈಬಿಟ್ಟು ಕರಡು ನಿಯಮಗಳ ಕನ್ನಡ ಸ್ನೇಹಿ ತಿದ್ದುಪಡಿಗೆ ಸರ್ಕಾರವು ಮುಂದಾಗಬೇಕೆಂದು. ಹೀಗೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಸರ್ಕಾರ ಆಗ್ರಹಿಸಿದ್ದಾರೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ದಿನಾಂಕ 19-08-2026ರಂದು ಸರ್ಕಾರಿ ಇಲಾಖೆಗಳ ಲಿಪಿಕ ವರ್ಗದ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕರಡು ನಿಯಮಗಳನ್ನು ಪ್ರಕಟಿಸಿದ್ದು, ಈ ನಿಯಮಗಳಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಗಳ ಪ್ರಭುತ್ವ ಪರೀಕ್ಷೆಗೆ ಸಮಾನ ಅಂಕಗಳನ್ನು ನಿಗದಿಪಡಿಸಿರುವ ಕ್ರಮವು ಗ್ರಾಮೀಣ-ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ಮಾರಕವಾಗಿದೆ. ಕನ್ನಡ ನಾಡಿನಲ್ಲಿ ಸರ್ಕಾರಿ ಉದ್ಯೋಗಕ್ಕೆ ಪ್ರವೇಶ ಪಡೆಯುವ ಪರೀಕ್ಷೆಗಳಲ್ಲಿಯೇ ಕನ್ನಡಕ್ಕೆ ಆಂಗ್ಲ ಭಾಷೆಯಷ್ಟೇ ಸ್ಥಾನವನ್ನು ನೀಡುವುದು ನ್ಯಾಯಸಮ್ಮತವಲ್ಲ ಎಂದು ಅವರು ವಿವರಿಸಿದರು. 35 ಅಂಕಗಳ ಪರೀಕ್ಷೆ ಕಡ್ಡಾಯ ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಮುಖ್ಯಸ್ಥರಿಗೆ ಬಿಳಿಮಲೆ ಅವರು ಪತ್ರ ಬರೆದಿದ್ದಾರೆ. ಕರಡು ನಿಯಮಗಳ ಪ್ರಕಾರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಕನ್ನಡ ಹಾಗೂ ಆಂಗ್ಲ ಭಾಷೆಗಳಲ್ಲಿ ತಲಾ 35 ಅಂಕಗಳ ಪರೀಕ್ಷೆಯನ್ನು ಕಡ್ಡಾಯವಾಗಿ ಬರೆಯಬೇಕಾಗಿದೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಅಭ್ಯರ್ಥಿಗಳಿಗೆ ತೀವ್ರ ಅನ್ಯಾಯವಾಗುವ ಸಾಧ್ಯತೆ ಇದೆ. ಇದು 1963ರ ಕರ್ನಾಟಕ ರಾಜಭಾಷಾ ನೀತಿಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಿದರು. Also Read Karnataka Public Schools: ಮುಂದಿನ ವರ್ಷ ಕೆಪಿಎಸ್ ಕ್ರಾಂತಿ! ಸರ್ಕಾರಿ ಶಾಲೆಗಳಿಗೆ ಸಿಗಲಿದೆ ಬೂಸ್ಟ್ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಕನ್ನಡಕ್ಕೆ ಪ್ರಥಮ ಪ್ರಾಶಸ್ತ್ಯವು ದೊರಕಬೇಕಿದೆ ಎಂದಿರುವ ಬಿಳಿಮಲೆ, ಉದ್ದೇಶಿತ ನಿಯಮಗಳಲ್ಲಿ ಕನ್ನಡ ಭಾಷಾ ಪರೀಕ್ಷೆಗೆ 50 ಅಂಕಗಳು ಹಾಗೂ ಆಂಗ್ಲ ಭಾಷಾ ಪರೀಕ್ಷೆಗೆ 20 ಅಂಕಗಳನ್ನು ನಿಗದಿಪಡಿಸುವ ಮೂಲಕ ಕರಡು ನಿಯಮಗಳ ಪರಿಷ್ಕರಣೆಗೆ ಸರ್ಕಾರವು ಮುಂದಾಗಬೇಕೆಂದು ಅವರು ಒತ್ತಾಯಿಸಿದರು. ಕನ್ನಡಕ್ಕೆ ಆಂಗ್ಲ ಭಾಷೆಯಷ್ಟೇ ಅಂಕ! ಕನ್ನಡ ನಾಡಿನ ಸರ್ಕಾರಿ ಉದ್ಯೋಗ ನೇಮಕಾತಿ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಆಂಗ್ಲ ಭಾಷೆಯಷ್ಟೇ ಅಂಕ ನೀಡುವುದು ಕನ್ನಡಕ್ಕೆ ಮಾಡುವ ಅನ್ಯಾಯವಾಗಿದೆ. ಕನ್ನಡ ಭಾಷಾ ಪರೀಕ್ಷೆಗೆ 50 ಹಾಗೂ ಆಂಗ್ಲ ಭಾಷಾ ಪರೀಕ್ಷೆಗೆ 20 ಅಂಕ ನಿಗದಿಪಡಿಸಿ ಕನ್ನಡಕ್ಕೆ ಅದರ ನ್ಯಾಯಸಮ್ಮತವಾದ ಪ್ರಥಮ ಪ್ರಾಶಸ್ತ್ಯವನ್ನು ಸರ್ಕಾರ ನೀಡಬೇಕು ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.














Comments