ಕರ್ನಾಟಕದಲ್ಲಿ ತೀವ್ರ ಬರ: 635 ಕೋಟಿ ರೂ. ವೆಚ್ಚಕ್ಕೆ ಸರ್ಕಾರ ಸಿದ್ಧ
ಕರ್ನಾಟಕದಲ್ಲಿ ಪ್ರಸ್ತುತ ವರ್ಷ ಹಿಂದೆಂದೂ ಕಾಣದ ಬರಗಾಲ ಬಂದಿದೆ. ಜನ - ಜಾನುವಾರುಗಳಿಗೆ ಯಾವುದೇ ಸಮಸ್ಯೆಯಾಗದಂತೆ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಸರ್ಕಾರ ಬರೋಬ್ಬರಿ 635 ಕೋಟಿ ರೂಪಾಯಿ ವ್ಯಯಿಸುತ್ತಿದ್ದೇವೆ. ನಮ್ಮಲ್ಲಿ ಹಣದ ಕೊರತೆ ಇಲ್ಲ ಎಂದು ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ.ಜಿ.ಪರಮೇಶ್ವರ ಅವರು ತಿಳಿಸಿದರು. ಗುರುವಾರ ರಾಜ್ಯದ ಬರಪೀಡಿತ ತಾಲೂಕುಗಳ ಕುರಿತಂತೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿನ ಪ್ರಸ್ತುತ ಬರ ಪರಿಸ್ಥಿತಿ, ಬೆಳೆ ನಷ್ಟದ ಮಾಹಿತಿ ಸೇರಿದಂತೆ ಬರ ನಿರ್ವಹಣೆಗೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು. ರಾಜ್ಯದಲ್ಲಿ ಜೂನ್ 1 ರಿಂದ ಆಗಸ್ಟ್ 26 ರವರೆಗೆ 666 ಮಿಲಿ ಮೀಟರ್ ಮಳೆಯಾಗಬೇಕಾದ ಕಡೆ ಕೇವಲ 465 ಮಿ.ಮೀ ಮಳೆಯಾಗಿದೆ. ಇದರಿಂದಾಗಿ ಶೇ.30 ರಷ್ಟು ಮಳೆ ಕೊರತೆಯಾಗಿದೆ. ರಾಜ್ಯದ 29 ಜಿಲ್ಲೆಗಳು ಹಾಗೂ 190 ತಾಲ್ಲೂಕುಗಳು ಮಳೆ ಕೊರತೆ ಮತ್ತು ತೀವ್ರ ಮಳೆ ಕೊರತೆಯ (Deficit to Large Deficit) ವ್ಯಾಪ್ತಿಯಲ್ಲಿದೆ. ಅದರಲ್ಲಿ 12 ತಾಲ್ಲೂಕುಗಳು ತೀವ್ರ ಮಳೆ ಕೊರತೆಯನ್ನು ಅನುಭವಿಸುತ್ತಿವೆ. ಆಗಸ್ಟ್ 26ರ ವೇಳೆಗೆ, ಮಳೆಯಿಲ್ಲದೆ ಸತತ ಮೂರಕ್ಕಿಂತ ಹೆಚ್ಚು ವಾರಗಳ ಕಾಲ ಒಣಹವೆ (Dry-spell) ಅನುಭವಿಸಿದ 134 ತಾಲ್ಲೂಕುಗಳನ್ನು ಗುರುತಿಸಲಾಗಿದೆ ಹಾಗೂ ಅವು ಟ್ರಿಗರ್-1 ಅಡಿಯಲ್ಲಿ ಮೌಲ್ಯಮಾಪನಕ್ಕೆ ಅರ್ಹತೆ ಪಡೆದಿವೆ ಎಂದು ಮಾಹಿತಿ ನೀಡಿದರು.














Comments